ಬಿಂಬ : 41 - 45

on Sunday, November 1, 2009

ಬಿಂಬ - 41
ಕಾವ್ಯವನ್ನರಿಯುವ ಸಂಯಮ ಸಿದ್ಧಿಸಿಕೊಂಡರೆ,
ಬದುಕು ಸವಿಯುವ ಸಾಮರ್ಥ್ಯ ಸಾಧಿಸಿದಂತೆ.

ಬಿಂಬ – 42
ತೀವ್ರ ನಿರಾಸೆಗಳಿಂದ ಪಾರಾಗಬೇಕಾದರೆ,
ಮೊದಲು ನಿರೀಕ್ಷೆಗಳನ್ನು ನಿಯಂತ್ರಿಸಬೇಕು.

ಬಿಂಬ - 43
ನಾವೇ ಹೆಣೆದ ಜೇಡರ ಬಲೆಯಲ್ಲಿ ಸೆರೆಯಾಗಿ
ಹೊರಬರಲಾಗದೆ ಒದ್ದಾಡುವುದು ವಿಪರ್ಯಾಸ.

ಬಿಂಬ – 44
ಜಗತ್ತಿನ ಅತಿ ಶ್ರೇಷ್ಠ ಶ್ರೀಮಂತ,
ನಿತ್ಯ ಸಾಹಿತ್ಯ ಸವಿಯುವ ಸಂತ.

ಬಿಂಬ – 45
ಯಶಸ್ಸನ್ನು ಸವಿಯುವ ಹುಮ್ಮಸ್ಸಿನಂತೆ,
ಸೋಲು ಸ್ವೀಕರಿಸುವ ಸಾಮರ್ಥ್ಯ ಅಗತ್ಯ.

ಹನಿಗಳು - 7

on Wednesday, October 28, 2009


-1-
ಮುಂಗಾರಿನ
ನಡೆ ಏಕೋ
ಮುಖ್ಯಮಂತ್ರಿಗಳ
ನುಡಿಯಂತೆ
ತೋರುತ್ತಿದೆ
ಅಲ್ಲವೆ?

-2-
ರೈತರ
ಉಚಿತ ವಿದ್ಯುತ್
ಕಡಿತ
ಇಂಧನ ಸಚಿವರ
ಶಾಕ್ ಟ್ರೀಟ್ಮೆಂಟ್
ಖಚಿತ

-3-
ಆರೋಗ್ಯ ಸಚಿವರಿಗೆ
ಸತತ ಅನಾರೋಗ್ಯ
ಪ್ರಚಾರ ಕಾರ್ಯಕ್ಕೆ
ಮಾತ್ರ ತಪ್ಪದವರ
ಆಗಮನದ ಭಾಗ್ಯ

-4-
ಸಚಿವೆಯ ಮನೆಯಲ್ಲಿ
ಕುಡಿತ, ಕುಣಿತ,
ಪಟಾಕಿ ಸಿಡಿತ
ಆಡಳಿತ ಪಕ್ಷದಲ್ಲಿ
ತೀವ್ರ ಭಿನ್ನಮತ

-5-
ಗೃಹಲಕ್ಷ್ಮಿ,
ಭಾಗ್ಯಲಕ್ಷ್ಮಿ,
ಆರೋಗ್ಯಲಕ್ಷ್ಮಿ
ಸದ್ಯ
ಸಂತಾನಲಕ್ಷ್ಮಿ
ವರ ನೀಡಲಿಲ್ಲ
ಮಾನ್ಯ
ಮುಖ್ಯ ಮಂತ್ರಿಗಳು

-6-
ಮಠಮಾನ್ಯರಿಗೆ
ಯಥೇಚ್ಛ
ಅನುದಾನ
ನೆರೆಪೀಡಿತರಿಗೆ
ಕೇವಲ
ಸಾಂತ್ವನ

-7-
ಚುನಾವಣಾ ಸಮರ
ಜಾತಿ, ಮತದ ಲೆಕ್ಕಾಚಾರ
ಹಣದ ಅಹಃಕಾರ
ಮದ, ಮತ್ಸರ,
ಮದ್ಯಸಾರದ
ವಿಕೃತ ಸಾಗರ

-8-
ಗೃಹ ಸಚಿವರಿಗೆ
ಭಾರೀ ಗಂಢಾಂತರ
ಆದರೂ ಅಂತಾರೆ
ಮಧ್ಯೆ ನಿಮ್ಮದೇನ್ರಿ
ಅವಾಂತರ

-9-
ಬಂತು ಬಂತು
ಕರೆಂಟು ಬಂತು
ಕೇವಲ
ಇಂಧನ ಸಚಿವರ
ಕನಸಲ್ಲಿ...

-10-
ರಾಜ್ಯದ ಬೊಕ್ಕಸ
ಖಾಲಿ ಖಾಲಿ
ದಿವಾಳಿ...
ಸಚಿವ ಸಂಪುಟಕ್ಕೆ
ಜಾಲಿ ಜಾಲಿ
ದೀಪಾವಳಿ.

ಮತ್ತೆ ಬರುವನು ಚಂದಿರ - 38

on Sunday, October 25, 2009


ಕೀರ್ತಿ, ಪ್ರತಿಷ್ಠೆಗಳ ಹಂಬಲಕೆ
ವಾದಿ-ಸಂವಾದಿಯ ಸಂಹಾರ
ಅಡ್ಡದಾರಿಗೆ ಅನುಮೋದಿಸುತ
ಅಡ್ಡಗತ್ತರಿಗೆ ಸಿಕ್ಕಿದ ಚಂದಿರ

ಸರಳ ಜೀವನದೃಷ್ಟಿಯ ಮರೆತು
ಸ್ವಾರ್ಥ ಆದ್ಯತೆಗಳ ಸೆರೆಯಿಂದ
ಸನಾತನ ಮೌಲ್ಯಗಳ ಪಸರಿಸುತ
ಪ್ರತಿಭೆಯ ಮೆರೆಯುವ ಚಂದಿರ

ನಡಾವಳಿಗಳ ಪರಿಶೀಲನೆ
ನಂಬುಗೆಗಳ ಪರಾಮಾರ್ಶೆ
ವಿದ್ಯಮಾನಗಳ ಅರಿವಿಂದ
ದೀವಟಿಗೆಯಾಗೊ ಚಂದಿರ

ಪಾಶ್ಚಾತ್ಯ ರಾಷ್ಟ್ರಗಳ ವಿಕೃತಿಗಳು
ಜಾಗತೀಕರಣದ ಹಪಹಪಿಕೆಗಳು
ಮೂಲಭೂತವಾದಿಗಳ ಹುನ್ನಾರ
ಹೆಡೆ ಬಿಚ್ಚಿರಲು ಎಚ್ಚರ ಚಂದಿರ

ಅಂತರಂಗದ ಅಳಲುಗಳ
ಚಿಂತನ ಮಂಥನಗಳಿಂದ
ಆತ್ಮಾನುಸಂಧಾನ ಹರಸುತ
ಆತ್ಮೋದ್ಧಾರವಾಗಲಿ ಚಂದಿರ

ವೇದ, ಉಪನಿಷತ್ತುಗಳಾಗಲಿ,
ಇಲ್ಲಾ ಬ್ರಹ್ಮಸೂತ್ರಗಳಾಗಲಿ
ಧಾರ್ಮಿಕ ಶಾಸ್ತ್ರಗಳಿದ್ದರೂ ಸರಿ
ದಾರ್ಶನಿಕನಾಗಿರೊ ಚಂದಿರ

ಬಡವರ ಬಾಳಿಗೆ ಕೊಳ್ಳಿಯನಿಟ್ಟು
ತೋರಿಕೆಯ ಆಚರಣೆಗಳು ಬೇಕೆ
ಆಡಂಬರದ ಪ್ರದರ್ಶನಗಳೆಂಬ
ವಿಕೃತಪೀಡೆ ತೊಲಗಿಸೊ ಚಂದಿರ

ಸಮಕಾಲೀನ ಪ್ರಜ್ಞೆಯೊಂದಿಗೆ
ಇತಿಹಾಸಗಳ ತಿರುವುಗಳಿಂದ
ತಾತ್ಕಾಲಿಕ ತಂತ್ರಗಳ ತೊರೆದು
ಪರಿಸರಪ್ರೇಮಿಯಾಗು ಚಂದಿರ

ಶತಮಾನಗಳ ನಿರ್ಲಕ್ಷದಿಂದಲೆ
ವಿಕೋಪಗಳು ತಾಂಡವವಾಡಿವೆ
ವಿಷಮಸ್ಥತಿಗೆ ತತ್ತರಿಸುವೆ ಬಹಳ
ತುರ್ತುಸುಧಾರಣೆ ಬೇಕು ಚಂದಿರ

ಅಧಿಕಾರದಾಸೆಗೆ ಮರುಳಾಗಿ
ಸಂಪತ್ತಿನ ಸಂಗ್ರಹ ಅನವರತ
ದ್ವೇಷ, ಸೇಡುಗಳು ಹಪಹಪಿಕೆ
ಇವ ದುಷ್ಟನಾಗಿಹನೊ ಚಂದಿರ