Sunday, June 28, 2009

ಮತ್ತೆ ಬರುವನು ಚಂದಿರ - 28

ಒಂಟಿ ಬದುಕಿನ ನಿರಂತರ ಓಟ
ಸಂಜೆಗಣ್ಣಿನ ಅಸ್ಪಷ್ಟ ನೋಟಕೆ
ಸ್ಥಾಯೀಭಾವದ ಸ್ಥಿರ ಹಿನ್ನಲೆಗೆ
ಹಿಮ್ಮೇಳ ನುಡಿಸುವನೊ ಚಂದಿರ

ನಡೆದ ಹಾದಿಯ ಪರಮಾವಧಿ
ಪಾಪ, ಪುಣ್ಯದ ಪರಮಾರ್ಥಕ
ಸಂಸರ್ಗ, ಸಂಸಾರ, ಸಂಸೃತಿ
ಸಂಸ್ಕರಿಸುವವನೆ ಚಂದಿರ

ಸಹನೆಯಿಂದೋಡಿಸುತ್ತಾ ಬೇಸರ
ಕ್ಷಮೆಯಿಂದ ನಿಯಂತ್ರಿಸು ಕೋಪ
ಬಲಹೀನತೆ ಜಯಿಸು ಪ್ರೇಮದಿಂದ
ತಪ್ಪನ್ನು ನಗುವಿಂದ ಉತ್ತರಿಸೊ ಚಂದಿರ

ಮುತ್ತಿರುವ ಪರದೆಗಳನ್ನು ಕಿತ್ತೆಸೆದು
ಅಡಗಿದ್ದ ವಿಕೃತಿ ಅನಾವರಣಗೊಳಿಸಿ
ಮುಕ್ತಿಮಾರ್ಗದಲಿ ನಡೆಯಲಿಚ್ಛಿಸಿದರೆ
ಆರ್ದ ಸಂತೃಪ್ತಿ ಸಿದ್ಧಿಸುವುದು ಚಂದಿರ

ಅವತರಿಪ ವಿಶಿಷ್ಟ ತುಮುಳಗಳಿಗೆ
ಕದಡದಿರಲಿ ಸ್ಥಿರಚಿತ್ತ, ಸಂಯಮ
ಕಾಲಾತೀತದಲ್ಲಿ ಲೀನವಾಗುವುದು
ಮತ್ತೆ ಮರುಕಳಿಸದಂತೆ ಚಂದಿರ

ನೆನಪುಗಳ ಹೊಳೆಯಲ್ಲಿ ಮಿಂದು
ಆಶಯಗಳಿಗೆ ವಾಸ್ತವದ ನೋಟ
ಪರಿಚಯಿಸುವ ಸ್ಥೈರ್ಯವಿರದಿದ್ದರೆ
ಗಾಳಿಗೋಪುರ ಖಚಿತ ಚಂದಿರ

ಭೂತ, ವರ್ತಮಾನದ ಬಿಡಿಚಿತ್ರಗಳು
ಅಗಾಧವಾಗಿ ಕಲಕುತಿವೆ ಮನವನ್ನು
ಏಕಾಗ್ರತೆಯ ಸಾಧಿಸುವ ಹಾದಿಯಲಿ
ಮತ್ತೆ ಸೋತಿರುವೆನೊ ಚಂದಿರ

ಬದುಕು ಕಾಣಿಸಿದ ಚಿತ್ರಗಳೆಲ್ಲವು
ಸ್ಥಾನಪಲ್ಲಟಗೊಂಡಿವೆ ಬಲುಬೇಗ
ಅದರ ವೇಗ, ಅವೇಗದ ಬಿರುಸಿಗೆ
ಬಲಿಪಶುವಾಗಿರುವೆನೊ ಚಂದಿರ

ಪ್ರತಿರೂಪಗಳ ಗುರುತಿಸಲಾಗದೆ
ಪರಿಕಲ್ಪನೆಗಳಿಗೆ ರೆಕ್ಕೆಗಳನ್ನಿಡದೆ
ಕಾರ್ಯಪ್ರವೃತ್ತಿಗೆ ಸಜ್ಜುಗೊಳ್ಳದೆ
ನುಚ್ಚುನೂರಾಗಿರುವೆನೊ ಚಂದಿರ

ಚಿಂತನೆಗಳಿಗೆ ಚಾಲನೆ ನೀಡದೆ
ಮಂಥನಗಳಿಗೂ ಮನಗೊಡದೆ
ಅಂತರಾತ್ಮವನೆಂದೂ ಪ್ರಶ್ನಿಸದೆ
ಅಸ್ಪಷ್ಟಗಳಿಗೆ ಬಲಿಯಾದೆ ಚಂದಿರ

Saturday, June 27, 2009

ಅಡಗಿದ್ದ ಶಿಷ್ಟ ಕರೆಗಳು

ಅಂತಃರಂಗದೊಳಗಿನ ಪುಟ್ಟ ದನಿ
ನನ್ನ ಕರೆದು ಹೇಳುತ್ತಿದೆ---
“ಸತ್ಯವೆಂಬ ಉಡುಗೊರೆ ಹಂಚು,
ಅದವರ ನೋವು ನಿವಾರಣೆಗೆ ನೆರವಾಗುತ್ತದೆ.” ಎಂದು.
ಅಂತಃಸತ್ವದಿಂದ ಚೈತನ್ಯ ಹೊಮ್ಮುತ್ತಿದೆ,
ಅದರ ದೃಢವಾದ ಪಿಸುಮಾತುಗಳಿಂದ.
ನನ್ನನ್ನು ಒತ್ತಾಯಿಸುತ್ತದೆ, ಒಳಗಿನ ಬೆಳಕನ್ನು ಹರಡಿ,
ಅಂಧಕಾರದಲ್ಲಿರುವವರ ಬದುಕನ್ನು ಬೆಳಗಲು.
ಆತ್ಮಸಾಕ್ಷಿ ಮೌನ ಮುರಿದು,
ನನ್ನಾತ್ಮವನ್ನು ಎಚ್ಚರಿಸುತ್ತದೆ, ಸುಖನಿದ್ರೆಯಿಂದ.
ದೊಂಬಿಡುತ್ತದೆ, ಪ್ರಶಾಂತ ಸಂತಸವನ್ನು ಪಸರಿಸಲು,
ಏಕೆಂದರೆ, ಉಳಿದವರನ್ನು ಅದು ತೊಂದರೆಗಳಿಂದ ಸಂರಕ್ಷಿಸುತ್ತದೆ.
ದಿವ್ಯ ನ್ಯಾಯಾಲಯದಲ್ಲಿ, ಅಂತರಾಳವೆಂಬ ನ್ಯಾಯಾಧೀಶರು
ಸೂಚಿಸುತ್ತಾರೆ, ನ್ಯಾಯವೆಂಬ ಸುವರ್ಣ ನಿಯಮವನ್ನು ಪಾಲಿಸಲು.
ಮೂಲ ನಂಬಿಕೆಗಳನ್ನು ಆಚರಿಸುತ್ತಾ ಸಮಾಜಕ್ಕೆ ಮಾದರಿಯಗಲು,
ಅದು ಅನ್ಯರ ಸಕಲ ಕಷ್ಟ ನಿವಾರಣೆಗೆ ಬಹಳ ಉಪಯೋಗವಾಗುತ್ತದೆ.
ಪ್ರಜ್ವಲ ಆಧ್ಯಾತ್ಮದ ಕರೆ
ಮತ್ತೆ ಚಿಗುರೊಡೆಯುತ್ತದೆ
ಈ ಸಲ ನನ್ನನ್ನು ವಿಶಾಲ ದೂರದೃಷ್ಟಿಯನ್ನು ಹಂಚಿಕೊಳ್ಳಲು ತಿಳಿಸುತ್ತದೆ,
ಎಲ್ಲರೂ ಸರ್ವ ಋತುಗಳಲ್ಲಿ, ಸನ್ಮಾರ್ಗದಲ್ಲಿ ನಡೆಯಲು ಸಹಾಯವಾಗಲೆಂದು.
ಅಂತಃರಂಗದ ಅರ್ಚಕ ಹೇಳುತ್ತಾನೆ,
ನೋವು ನಿವಾರಕ ಶಕ್ತಿಯನ್ನು ಅನುಗ್ರಹಿಸಲು,
ಮತ್ತೆ ಆಜ್ಞಾಪಿಸುತ್ತಾನೆ, ಅದರ ಸದುಪಯೋಗವನ್ನು ಎಲ್ಲೆಡೆ ಹರಡಲು,
ಎಲ್ಲರೂ ತಮ್ಮ ಸುಂಗಧ ಪರಿಮಳವನ್ನು ಮತ್ತೆ ಹಿಂಪಡೆಯಲು.
ನನ್ನ ಏಕಾಂತತೆಯ ಗೂಡಿಂದ,
ನನಗೆ ಜ್ಞಾನ ಸಿದ್ಧಿಸುತ್ತದೆ, ದಿವ್ಯಸ್ಪೂರ್ತಿಯ ದೇವಕನ್ಯೆಯರಿಂದ,
ನಂತರ ಅದು ಎಲ್ಲಡೆಗೆ ಹಬ್ಬುತ್ತದೆ,
ಯಾರೊಬ್ಬರನ್ನೂ ಬಿಡದ ಹಾಗೆ, ಅವರ ದುಃಖಗಳನ್ನು ಸರ್ವನಾಶಮಾಡಲು.
ಅಡಗಿದ್ದ ಶಿಷ್ಟ ಕರೆಗಳ ಈ ಜ್ಯೋತಿ
ಜೀವಂತವಾಗಿ ಹೀಗೇ ಬೆಳಗುತ್ತಿರಲು,
ನಾನು ಮುಂದುವರೆಸುತ್ತೇನೆ, ಶಿಷ್ಟ ಸಲಹೆಗಳ ಸ್ವೀಕರಿಸುವುದನ್ನು,
ನಾನು ಹೀಗೆ ಹಂಚಿಕೊಳ್ಳುವುದನ್ನೂ ಸಹ ಮುಂದುವರೆಸುತ್ತೇನೆ,
ಸರ್ವ ಶ್ರೇಷ್ಠ ಜಗತ್ ಸತ್ಯಗಳ ಹರಡುವುದನ್ನು.

ಮೂಲ ಕವಿಯತ್ರಿ : ಚಿತ್ರ .ಜಿ. ಲೇಲೆ
ಕನ್ನಡಕ್ಕೆ : ಚಂದಿನ

Friday, June 26, 2009

ಪ್ರಸಕ್ತ ಚಿತ್ರಣಕ್ಕೊಂದು ಕನ್ನಡಿ

ಎಷ್ಟೋ ಕೊರತೆಗಳಿರುವುದು ಕಂಡಿದ್ದೇನೆ
ಅವನ್ನು ಪಡೆಯಲಿಕ್ಕೆ, ದುಬಾರಿ ಬೆಲೆ.
ಜನಸಾಮಾನ್ಯರು ಅತ್ತಿತ್ತ ಪರದಾಡುತ್ತಾರೆ
ಊಟ, ನೀರು ಮತ್ತೆ ನೆಲೆಗಾಗಿ.

ಪ್ರಾಮಾಣಿಕರಿಗೆ ಉಸಿರುಗಟ್ಟುವ ಸನ್ನಿವೇಶ
ನರಿಗಳಂಥವರು ತಮ್ಮ ತಿಜೋರಿ ತುಂಬಿಸುತ್ತಾರೆ
ಸುಳ್ಳು ಪ್ರಮಾಣ ಪತ್ರ ನೀಡಿ ಪ್ರಭಾವಿಗಳಾಗುತ್ತಾರೆ
ಮಧ್ಯರಾತ್ರಿ ನಿದ್ದೆಗೆಟ್ಟು ಓದುವವರಿಗೆ ಕೇವಲ ವಯಸ್ಸಾಗುತ್ತದೆ.

ಕುತಂತ್ರಿಗಳು ಪರರ ಪರಿಶ್ರಮವನ್ನು ದೋಚುತ್ತಾರೆ
ಅಳಿದುಳಿದದ್ದು ಮಾತ್ರ ಪ್ರತಿಭಾನ್ವಿತರಿಗೆ ನೀಡುತ್ತಾರೆ
ಪರಿಣಾಮಕಾರಿ ಕೆಲಸಗಾರರನ್ನು ಹೊರಹಾಕುತ್ತಾರೆ
ಸೋಮಾರಿಗಳನ್ನು ಶ್ರೇಷ್ಟರೆಂದು ಬಿಂಬಿಸುತ್ತಾರೆ.

ಭ್ರಷ್ಟಾಚಾರ, ಕುತಂತ್ರಗಳಿಂದು ಸಹಜ ಸ್ವಾಭಾವಿಕವಾಗಿವೆ
ಅವರಿಗೆ ತಿರುಗಿ ಬಿದ್ದವರನ್ನು ನಿರ್ಣಾಮ ಮಾಡುತ್ತಾರೆ
ಉದ್ಯೊಗವಕಾಶಗಳು ತಮ್ಮ ಹೊಗಳು ಭಟ್ಟರಿಗೆ ಮೀಸಲು
ಸಾಮರ್ಥ್ಯ ಹೊಂದಿರುವವರನ್ನು ಕಡೆಗೆಣಿಸುತ್ತಾರೆ.

ಪ್ರಶಸ್ತಿಗಳೇನಿದ್ದರೂ ತಮ್ಮ ಅನುಯಾಹಿಗಳಿಗೆ ಮಾತ್ರ
ಉಳಿದವರಿಗೆ ಶಿಸ್ತುಕ್ರಮ ಕೂಡಲೇ ಜಾರಿಗೊಳಿಸುತ್ತಾರೆ
ಉಳ್ಳವರು ಮಾತ್ರ ಮತ್ತೂ ಶ್ರೀಮಂತರಾಗುತ್ತಾರೆ
ನಿಸ್ವಾರ್ಥ ಶ್ರಮಿಕರು ಮತ್ತೂ ಬಡವರಾಗುತ್ತಾರೆ.

ಹೆಗ್ಗಣಗಳಂಥಹ ಲಂಚಕೋರರಿಗೆ ಉತ್ತಮ ಅವಕಾಶ ಲಭ್ಯ
ಪ್ರಾಮಾಣಿಕರತ್ತ ಒಮ್ಮೆ ತಿರುಗಿ ನೋಡಲೂ ಸಹ ಹೇಸುತ್ತಾರೆ
ಬಡ್ತಿಯೆಂಬುದು ಕೆಲವರ ಪಿತ್ರಾರ್ಜಿತ ಆಸ್ತಿಯಂತೆ ಅನುಭವಿಸುತ್ತಾರೆ
ನೀತಿವಂತರಿಗೆ ಮಾತ್ರ ಹಿಂಬಡ್ತಿಯ ಕೊಡುಗೆ ನೀಡುತ್ತಾರೆ.

ಮೌಲ್ಯ, ನೈತಿಕತೆ ಎಂಬುದೆಂದೋ ಕಳೆದು ಹೋಗಿವೆ
ಅವನೀತಿವಂತರನ್ನೇ ಅತ್ಯುತ್ತಮರೆಂದು ಕೊಂಡಾಡುತ್ತಾರೆ
ಆದರೂ, ಅಲ್ಲಲ್ಲಿ ಸತ್ಯದ ಹಣತೆಗಳು ಇನ್ನೂ ಕಂಡುಬರುತ್ತವೆ
ಅವುಗಳನ್ನು ಉಳಿಸಿಕೊಳ್ಳದಿದ್ದರೆ, ಕೊಳೆಯುವುದಂತೂ ನಿಶ್ಚಿತ.

ಮೂಲ ಕವಿಯತ್ರಿ : ಚಿತ್ರ .ಜಿ. ಲೇಲೆ
ಕನ್ನಡಕ್ಕೆ : ಚಂದಿನ